9:25 AM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು…

ಇತ್ತೀಚಿನ ಸುದ್ದಿ

ಭ್ರಷ್ಟಾಚಾರ, ಅವ್ಯವಹಾರ ವಾಸನೆ: ರಾಜಕೀಯ ಸಂತ್ರಸ್ತರ ಗಂಜಿ ಕೇಂದ್ರಗಳೇ ಈ ಭಾಷಾ ಅಕಾಡೆಮಿಗಳು?

05/08/2021, 12:30

ಮಂಗಳೂರು(reporterkarnataka.com): ಸಾಹಿತಿಗಳು, ವಿದ್ವಾಂಸರು, ಭಾಷಾ ತಜ್ಞರು, ಕಲಾವಿದರು ಇರಬೇಕಾದ ಅಕಾಡೆಮಿಗಳು ಇಂದು ರಾಜಕೀಯ ಪಕ್ಷಗಳ ಆಟದ ಮೈದಾನವಾಗಿ ಪರಿವರ್ತನೆಗೊಂಡಿದೆ. ಸರಕಾರ ಬದಲಾದಂತೆ ಅಧ್ಯಕ್ಷರನ್ನು ಬದಲಾಯಿಸುವ ಕೆಟ್ಟ ಪರಂಪರೆ ಹುಟ್ಟಿಕೊಂಡಿದೆ. ಇದರ ಪರಿಣಾಮವಾಗಿ ನಿಜವಾದ ಸಾಹಿತಿ, ಕಲಾವಿದರು, ವಿದ್ವಾಂಸರು ಅಕಾಡೆಮಿ ಚುಟುವಟಿಕೆಯಿಂದ ದೂರ ಸರಿಯುತ್ತಿದ್ದಾರೆ. ಇವೆಲ್ಲದರ ಫಲಶೃತಿ ಎನ್ನುವಂತೆ ಅಕಾಡೆಮಿಗಳು ಕೂಡ ಕಲುಷಿತಗೊಂಡು ಭ್ರಷ್ಟಾಚಾರದ ಕಡು ವಾಸನೆ ಮೂಗಿಗೆ ಬಡಿಯಲಾರಂಭಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಭಾಷಾ ಅಕಾಡೆಮಿಗಳು ವಾಸ್ತವದಲ್ಲಿ ರಾಜ್ಯದ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಕಾರ್ಯ ನಿರ್ವಹಿಸಬೇಕು. ಆದರೆ ಈ ನಿಟ್ಟಿನಲ್ಲಿ ತುಳು, ಕೊಂಕಣಿ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿಗಳು ಎಷ್ಟು ಕಾರ್ಯನಿರ್ವಹಿಸಿವೆ ಎಂಬ ಪ್ರಶ್ನೆ ಎಳತೊಡಗುತ್ತದೆ. ರಾಜ್ಯದ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದಂತೆ ಸಾಹಿತಿ, ವಿದ್ವಾಂಸರು, ಕಲಾವಿದರನ್ನು ಗುರುತಿಸಿ ಅವರಿಂದ ಪುಸ್ತಕಗಳನ್ನು ಪ್ರಕಟಿಸುವ ಕೆಲಸವನ್ನು ಈ ಅಕಾಡೆಮಿಗಳು ಮಾಡಿವೆಯೇ?

ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆಯೇ ? ಸಾಧಕರನ್ನು ಗುರುತಿಸಿ ಸನ್ಮಾನಿಸಿದೆಯೇ? ಎಂದು ಪ್ರಶ್ನಿಸಿದರೆ ದೊಡ್ಡ ಶೂನ್ಯ ಎದುರು ಬಂದು ನಿಲ್ಲುತ್ತದೆ. ಹಾಗಾದರೆ ಅಕಾಡೆಮಿ ಸ್ಥಾಪಿಸಿದ ಉದ್ದೇಶವೇನು? ರಾಜಕೀಯ ಸಂತ್ರಸ್ತರಿಗೆ ಕೇವಲ ಗಂಜಿ ಕೇಂದ್ರವೇ ಇದು? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ.

ಇತ್ತೀಚಿನ ಕೆಲವು ವರ್ಷಗಳಿಂದ ಅಕಾಡಮಿಯ ಸ್ಥಾಪನೆಯ ಉದ್ದೇಶಗಳೇ ಈಡೇರುತ್ತಿಲ್ಲ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಅರವಿಂದ ಶ್ಯಾನಭಾಗ ಆರೋಪಿಸುತ್ತಾರೆ.

ತುಳು, ಕೊಂಕಣಿ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಸೇರಿದಂತೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 15ಕ್ಕೂ ಅಧಿಕ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಸ್ಥಳೀಯ ಪ್ರಯಾಣ ವೆಚ್ಚವೆಂದು ಮಾಸಿಕ 30,000 ರೂ., ದೂರವಾಣಿ ಬಾಬ್ತು 3,000 ರೂ., ಮಾಸಿಕ ಗೌರವ ಸಂಭಾವನೆ 25,000 ರೂ. ಪಾವತಿಸಲಾಗುತ್ತದೆ. ಆದರೆ ಇಲಾಖೆಯ ಎಲ್ಲ ಮಾರ್ಗಸೂಚಿ, ನಿಯಮಗಳನ್ನು ಗಾಳಿಗೆ ತೂರಿರುವ ಅಕಾಡಮಿಯ ಅಧ್ಯಕ್ಷರು ಬೈಲಾ ಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಸಾಹಿತಿ, ಕಲಾವಿದರು, ವಿದ್ವಾಂಸರು ಇರಬೇಕಾದ ವೇದಿಕೆಗಳು ರಾಜಕೀಯ ಪಕ್ಷಗಳ ಮತ್ತು ತಮಗೆ ಅಧಿಕಾರ ಸಿಗಲು ಕಾರಣರಾದ ಮುಖಂಡರ ಗುಣಗಾನಕ್ಕೆ ಮೀಸಲಿಡಲಾಗುತ್ತದೆ. ಬೃಹತ್ ಶಾಮಿಯಾನ, ಪೆಂಡಾಲುಗಳು, ಅದ್ದೂರಿ ಊಟೋಪಚಾರಗಳಿಂದ ಕೆಲವು ಕಾರ್ಯಕ್ರಮಗಳು ಸಮಾವೇಶಗಳಂತಾಗಿ ದುಂದುವೆಚ್ಚಕ್ಕೆ ಕಾರಣವಾಗುತ್ತಿದೆ. ಕೊಂಕಣಿ, ತುಳು, ಬ್ಯಾರಿ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಿದ್ದ ಅಕಾಡಮಿಗಳು ಭಾರೀ ವೆಚ್ಚದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸರಕಾರದ ಹಣವನ್ನು ಪೋಲು ಮಾಡುತ್ತಿದೆ ಎಂದು ಡಾ.ಅರವಿಂದ ಶ್ಯಾನಭಾಗ ಹೇಳುತ್ತಾರೆ.

ಈ ಹಿಂದೆ ಕಾರ್ಕಳ ಮತ್ತು ಮಣಿಪಾಲದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದ ಖರ್ಚುವೆಚ್ಚ 30,36,728 ರೂ. ಆಗಿರುವುದು ಹಣ ಪೋಲು ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕೊಂಕಣಿ ಅಕಾಡಮಿಯ ಅಧ್ಯಕ್ಷರ ಪ್ರಯಾಣ ಭತ್ತೆಯು ಒಂದೂವರೆ ವರ್ಷದಲ್ಲಿ 6,38,880 ರೂ. ಆಗಿದೆ. ಬ್ಯಾರಿ ಸಾಹಿತ್ಯ ಅಕಾಡಮಿಯು ಬಹುಭಾಷಾ ಸಂಗಮದ ಹೆಸರಿನಲ್ಲಿ ಇತ್ತೀಚೆಗೆ ಕಾರವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ದುಂದುವೆಚ್ಚದ ಪಟ್ಟಿಗೆ ಸೇರಿಕೊಂಡಿದೆ ಎಂದು ಡಾ.  ಶ್ಯಾನಭಾಗ ನುಡಿಯುತ್ತಾರೆ.

2020ರ ಎಪ್ರಿಲ್/ಮೇ ತಿಂಗಳಲ್ಲಿ ಮನೆಯಲ್ಲೇ ಕುಳಿತ ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಶ್ರೇಯಾನ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ಡಾ. ಜಗದೀಶ ಪೈ ಸಾನು ಟ್ರಾವೆಲ್ಸ್ ಹೆಸರಿನಲ್ಲಿ, ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ ಅವರು ಮುಹಮ್ಮದ್ ಹಕೀಂ ಹೆಸರಿನಲ್ಲಿ ತಿಂಗಳಿಗೆ 30 ಸಾವಿರ ರೂ.ನಂತೆ ಪ್ರಯಾಣ ಭತ್ತೆ ಸ್ವೀಕರಿಸಿ ಸರಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಅವರು ಆರೋಪಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು