ಇತ್ತೀಚಿನ ಸುದ್ದಿ
ಹೀಗೊಂದು ಅಮಾನವೀಯ ಕೃತ್ಯ: ಮಂಗಳೂರಿನಲ್ಲಿ ಬೀದಿ ನಾಯಿಯ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿ
03/07/2021, 09:06
ಮಂಗಳೂರು(reporterkarnataka news): ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸುವ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಶ್ವಾನವನ್ನು ಬೈಕ್ ಗೆ ಕಟ್ಟಿ ಎಳೆದ ಘಟನೆ ಇನ್ನೂ ಹಸಿರಾಗಿರುವಾಗಲೇ ನಗರದ ಶಿವಭಾಗ್ ಸಮೀಪ ಬೀದಿ ನಾಯಿಯೊಂದನ್ನು ಗುಂಡಿಟ್ಟು ಸಾಯಿಸಲಾಗಿದೆ.
ಶಿವಭಾಗ್ ಸಮೀಪದ ಜ್ಯುವೆಲ್ಲರ್ಸ್ ಮಳಿಗೆಯೊಂದರ ಹಿಂಭಾಗದಲ್ಲಿ ತಡರಾತ್ರಿ ಬೀದಿನಾಯಿಯನ್ನು ಗುಂಡು ಹೊಡೆದು
ಕೊಲ್ಲಲಾಗಿದೆ. ಈ ಘಟನೆ ಪ್ರಾಣಿಪ್ರಿಯರಲ್ಲಿ ಆತಂಕ ಉಂಟು ಮಾಡಿದೆ. ಅನಿಮಲ್ ಕೇರ್ ಟ್ರಸ್ಟ್ನ ಮುಖ್ಯಸ್ಥೆ ಸುಮಾ ಅವರು ಈ ಕುರಿತು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿದ್ದ ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ನಾಯಿಯನ್ನು ಆ್ಯಂಬುಲೆನ್ಸ್ ಮೂಲಕ ನಗರದ ಜೈಲು ರಸ್ತೆಯ ಪಶು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿಯ ದೇಹದಲ್ಲಿ ಬುಲೆಟ್ ಲಭಿಸಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಮಾ ರಮೇಶ್, ಇದೊಂದು ಅಮಾನವೀಯ ಕೃತ್ಯ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಗುಂಡು ಹಾರಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.