ಇತ್ತೀಚಿನ ಸುದ್ದಿ
ಶಾಲಾ-ಕಾಲೇಜು ತೆರೆಯುವುದು ಡೌಟೇ? ಕೇಂದ್ರ ಶೂನ್ಯ ವರ್ಷ ಘೋಷಿಸುವುದೇ?
September 22, 2020, 8:19 AM

ನವದೆಹಲಿ(reporterkarnataka news): ಶಾಲಾ – ಕಾಲೇಜು ಆರಂಭಿಸಲು ಬಹುತೇಕ ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯ ಸರಕಾರ ತುದಿಗಾಲಿನಲ್ಲಿ ನಿಂತಿದೆ. ಅದೇ ರೀತಿ ಯಾವಾಗ ತರಗತಿಗಳು
ಆರಂಭವಾಗುತ್ತದೆ ಎಂಬ ಭಯ ಹೆತ್ತವರಲ್ಲಿ ಕಾಡಲಾರಂಭಿಸಿದೆ.
ಬಹುತೇಕ ಪೋಷರು ಮಕ್ಕಳನ್ನು ಶಾಲೆಗೆ ಕಳುಹಿಸಲು ಇನ್ನೂ ಸಿದ್ಧರಿಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
ರಾಜ್ಯ ಸರಕಾರವೇನು ಶಾಲಾ – ಕಾಲೇಜು ತೆರೆಯುವಲ್ಲಿ ಉತ್ಸಕವಾಗಿದ್ದರೂ ಕೇಂದ್ರ ಸರಕಾರ ಮಾತ್ರ ಯಾವುದೇ ಸ್ಪಂದನ ನೀಡುತ್ತಿಲ್ಲ. ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಕುರಿತು ಯಾವುದೇ ಮಾರ್ಗಸೂಚಿಯನ್ನು ಸದ್ಯಕ್ಕೆ ಬಿಡುಗಡೆಗೊಳಿಸುವ ಲಕ್ಷಣ ಕಂಡು ಬರುತ್ತಿಲ್ಲ.
ದೇಶದಲ್ಲಿ ಎಲ್ಲವೂ ಅನ್ ಲಾಕ್ ಆಗುತ್ತಿದ್ದಂತೆ ಮಹಾಮಾರಿ ಕೊರೊನಾದ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಇಷ್ಟರವರೆಗೆ ಜನ ಸಾಮಾನ್ಯರು ಸೋಂಕಿಗೆ ಬಲಿಯಾಗುತ್ತಿದ್ದರೆ, ಇದೀಗ ಸಚಿವರು, ಶಾಸಕರು, ಸಂಸದರು ಬಲಿಯಾಗುತ್ತಿದ್ದಾರೆ. ಸರಕಾರಕ್ಕೆ ಇದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇವೆಲ್ಲದರ ನಡುವೆ ಶಾಲೆ ಕಾಲೇಜು ಆರಂಭಿಸುವ ರಿಸ್ಕ್ ತೆಗೆದುಕೊಳ್ಳಲು ಕೇಂದ್ರ ಸರಕಾರ ಸಿದ್ದವಿಲ್ಲ ಎನ್ನಲಾಗಿದೆ. ಒಂದು ರೀತಿಯಲ್ಲಿ ಈ ವರ್ಷ ಶಾಲೆ ತೆರೆಯುವ ಆಲೋಚನೆಯೇ ಕೇಂದ್ರ ಸರ್ಕಾರ ಇಲ್ಲ ಎನ್ನಲಾಗಿದೆ. ಆದರೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ತೀರ್ಮಾನಿಸಿದೆ.
2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷ ಎಂದು ಪರಿಗಣಿಸಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ಮಕ್ಕಳು ಮನೆಯಲ್ಲೇ ಓದಿಕೊಂಡು ಹೋಗಿ ಪರೀಕ್ಷೆ ಬರೆಯುವುದು ಅನಿವಾರ್ಯ ಎನ್ನುವುದು ಕೇಂದ್ರ ಸರ್ಕಾರದ ನಿರ್ಧಾರ ಎನ್ನಲಾಗಿದೆ.
ಆನ್ಲೈನ್ ತರಗತಿ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್ ಹೇಳಿದ ಬಳಿಕ ಕೇಂದ್ರ ಸರಕಾರ ಹೊಸ ಮಾನದಂಡ ರೂಪಿಸಿದೆ. 3ನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಇರುವುದಿಲ್ಲ. 4ನೇ ತರಗತಿಯಿಂದ 7ನೇ ತರಗತಿ ತನಕ ಕಡಿಮೆ ಪ್ರಮಾಣದಲ್ಲಿ ಆನ್ಲೈನ್ ಶಿಕ್ಷಣ ಇರಲಿದೆ. ಪ್ರೌಢಶಾಲೆಯ ಮಕ್ಕಳಿಗೆ ಅಂದರೆ 8ನೇ ತರಗತಿಯಿಂದ ಸಂಪೂರ್ಣ ಆನ್ಲೈನ್ ಶಿಕ್ಷಣ ವ್ಯವಸ್ಥೆ ಇರಲಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶ್ನಾಪತ್ರಿಕೆ ಸಂಗ್ರಹವನ್ನು ನೀಡುವ ಗುರಿ ಹೊಂದಲಾಗಿದೆ. ಇತ್ತೀಚೆಗೆ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಇಷ್ಟು ಮಾಹಿತಿಗಳ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸಮಿತಿಯು ರಾಜ್ಯಗಳ ಸಲಹೆ ಕೇಳಿ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಹೇಳಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ತೆರೆಯುವ ಯಾವ ನಿರ್ಧಾರವನ್ನೂ ಮಾಡಲಾಗಿಲ್ಲ ಎಂದಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕು ದೇಶವ್ಯಾಪಿ ಹರಡುತ್ತಲೇ ಇದೆ. ಪ್ರತಿದಿನ ದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗುತ್ತಲೇ ಇದ್ದಾರೆ. ಒಮ್ಮೆ ಶಾಲಾ ಕಾಲೇಜುಗಳು ಆರಂಭವಾದ ಬಳಿಕ ಕೆಲವರಿಗೆ ಸೋಂಕು ತಗುಲಿದರೆ ನೂರಾರು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರಲಿದೆ. ಇದು ಮತ್ತಷ್ಟು ಸೋಂಕು ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅರ್ಥಾತ್ ಶಿಕ್ಷಣ ಸಚಿವಾಲಯ ಈಗಾಗಲೇ ಶೂನ್ಯ ವರ್ಷ ಎಂದು ಘೋಷಣೆ ಮಾಡುವ ನಿರ್ಧಾರ ಮಾಡಿದ್ದು, ಕೇಂದ್ರ ಸರಕಾರದ ಎದುರು ಇಡಲಾಗಿದೆ. ಆದರೆ ರಾಜ್ಯಗಳ ನಿರ್ಧಾರವನ್ನು ಕೇಳಿಕೊಂಡು ಆ ಬಳಿಕ ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಗೃಹ ಇಲಾಖೆ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಪ್ರಕಟ ಮಾಡಲಾಗುವುದು ಎಂದಿದ್ದಾರೆ. ಅಂದರೆ ದೇಶದಲ್ಲಿ ಸಾವಿರಾರು ಮಕ್ಕಳಿಗೆ ಕೊರೊನಾ ಸೋಂಕು ಬಂದರೆ ಚಿಕಿತ್ಸೆ ಕೊಡುವಷ್ಟು ಮೂಲಸೌಕರ್ಯ ಇದೆಯಾ..? ಶಿಕ್ಷಣ ವ್ಯವಸ್ಥೆಯಲ್ಲಿ ಏನು ಮಾಡಬೇಕು..? ಶೂನ್ಯ ವರ್ಷದಿಂದ ಆಗುವ ಅನಾನುಕೂಲಗಳು ಏನು ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದೆ.