ಇತ್ತೀಚಿನ ಸುದ್ದಿ
ಕೋಲಾರ ಕೈಗಾರಿಕೆ ಪ್ರದೇಶದಲ್ಲಿ ಪೊಲೀಸ್ ಠಾಣೆ ತೆರೆಯಲು ಗೃಹ ಸಚಿವರಿಗೆ ರೈತಸಂಘ ಮನವಿ
December 19, 2020, 7:00 PM

ಕೋಲಾರ(reporterkarnataka news): ಅತಿ ಹೆಚ್ಚು ಕೈಗಾರಿಕೆಗಳನ್ನು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪಿಎಸ್ಐ ಸಮೇತ ಪೊಲೀಸ್ ಠಾಣೆಯನ್ನು ತೆರೆದು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿ ರೈತಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಾರ್ಖಾನೆಗಳಿದ್ದು, ಲಕ್ಷಾಂತರ ಮಂದಿ ಕಾರ್ಮಿಕರು ಹೊರಗುತ್ತಿಗೆ, ಖಾಯಂ ನೌಕರರಾಗಿ ದುಡಿಯುತ್ತಿದ್ದಾರೆ. ಸ್ಥಳೀಯರ ಜೊತೆಗೆ ಹೊರ ರಾಜ್ಯಗಳಿಂದಲೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಗಾಗ ಅನೇಕ ಅಪರಾಧ ಪ್ರಕರಣಗಳು ಜರುಗುತ್ತಲೇ ಇರುತ್ತವೆ. ಆದರೂ ಇಲ್ಲಿ ಪೊಲೀಸ್ ಠಾಣೆ ಆರಂಭಿಸಿಲ್ಲ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾದರೂ ವೇಮಗಲ್ ಠಾಣೆ ಪೊಲೀಸರು ಆಗಮಿಸಬೇಕಾಗಿದ್ದು, ವೇಮಗಲ್ನಲ್ಲಿಯೂ ಕೈಗಾರಿಕೆ ಪ್ರದೇಶ ಇರುವುದರಿಂದಾಗಿ ಎರಡೂ ಕಡೆ ನೋಡಿಕೊಳ್ಳಲು ವೇಮಗಲ್ ಠಾಣೆಯ ಸಿಬ್ಬಂದಿಗೆ ಹೆಚ್ಚಿನ ಒತ್ತಡವಿದೆ ಎಂದು ವಿವರಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ ಮಾತನಾಡಿ, ಈಗಾಗಲೇ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಪೊಲೀಸ್ ಠಾಣೆ ಇದ್ದಿದ್ದರೆ ವಿಸ್ಟ್ರಾನ್
ಕಂಪನಿಯಲ್ಲಿ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಗೃಹ ಸಚಿವರುಗಳು ಜಿಲ್ಲೆಗೆ ಬಂದಾಗಲೆಲ್ಲಾ ನರಸಾಪುರದಲ್ಲಿ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆ ಭರವಸೆಗಳನ್ನು ನೀಡುತ್ತಿದ್ದರಾದರೂ ಈವರೆಗೂ ಅದು ಕಾರ್ಯರೂಪಕ್ಕೆ ಬಾರಲೇ ಇಲ್ಲ. ವಿಸ್ಟ್ರಾನ್ ಕಂಪನಿಯಲ್ಲಿನ ಘಟನೆಯಿಂದಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದ್ದು, ಗೃಹ ಸಚಿವರು ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪಿಎಸ್ಐ, ಸಿಬ್ಬಂದಿ ಸಮೇತ ಪೊಲೀಸ್ ಠಾಣೆಯನ್ನು ಆರಂಭಿಸಿ, ಅಹಿತಕರ ಘಟನೆಗಳು ತಡೆಯುವ ಜೊತೆಗೆ ಕಾರ್ಮಿಕರ ಸಮಸ್ಯೆಗಳಿಗೂ ಸ್ಪಂದಿಸಬೇಕಾಗಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು, ಈ ಕೂಡಲೇ ತಮ್ಮ ಮನವಿಯನ್ನು ಗೃಹ ಸಚಿವರಿಗೆ ತಲುಪಿಸಿ ಸಮಸ್ಯೆ ಗಮನಕ್ಕೆ ತರುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸAದ್ರ ತಿಮ್ಮಣ್ಣ, ವೆಂಕಟೇಶಪ್ಪ, ಚಾಂದ್ಪಾಷ, ಮಹಮದ್ ಶಹೀಬ್, ಕಿರಣ್, ಸುಪ್ರೀಂಚಲ, ಜಗ್ಗಿ ಮತ್ತಿತರರು ಉಪಸ್ಥಿತರಿದ್ದರು.