ಇತ್ತೀಚಿನ ಸುದ್ದಿ
ಮೊದಲು ಕೊರೊನಾ ನಿಯಂತ್ರಿಸಿ, ಮತ್ತೆ ರಸ್ತೆಗೆ ಹೆಸರಿಡಿ !: ಮೇಯರ್ಗೆ ಜನರ ಹಕ್ಕೊತ್ತಾಯ
September 27, 2020, 9:21 AM

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ಎಲ್ಲವೂ ಅನ್ ಲಾಕ್ ಆಗಿದೆ. ವೈರಸ್ ಕಾಟ ಜಾಸ್ತಿಯಾಗುತ್ತಿದೆ. ದಿನ ಕಳೆದಂತೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುತ್ತಿದೆ. ಆರಂಭದಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾದರೆ ಇಡೀ ಊರೇ ಗಪ್ ಚಿಪ್. ಇದೀಗ ನಾಲ್ನೂರು ಪತ್ತೆಯಾದರೂ ಯಾರಿಗೂ ಕ್ಯಾರೇ ಇಲ್ಲ.
ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ. ಹಾಗೆ 420 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಲ್ಲಿಯೂ ದಿನ ಕಳೆದಂತೆ ಸೋಂಕು ಪ್ರಮಾಣ ಹೆಚ್ಚುತ್ತಿದ್ದರೂ, ಮಂಗಳೂರಿನ ಪ್ರಥಮ ಪ್ರಜೆ, ಮೇಯರ್ ದಿವಾಕರ ಪಾಂಡೇಶ್ವರ ಅವರು ರಸ್ತೆಗೆ ಮರು ನಾಮಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕರಾವಳಿಯ ಮಣ್ಣಿನ ಮಕ್ಕಳ ಸಂಕೇತವಾಗಿದ್ದ ವಿಜಯ ಬ್ಯಾಂಕ್ ನ್ನು ಕೇಂದ್ರ ಸರಕಾರ ಗುಜರಾತಿನ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡಿದ ಬಳಿಕ ಮಂಗಳೂರು ಮಹಾನಗರಪಾಲಿಕೆ ವಿಜಯ ಬ್ಯಾಂಕ್ ನ ಸಂಸ್ಥಾಪಕರಾದ ಸುಂದರ್ ರಾಮ್ ಶೆಟ್ಟಿ ಅವರ ನಾಮಕರಣ ಮಾಡಿದೆ. ‘ಬ್ಯಾಂಕ್ ನಲ್ಲಿ ಹೋದ ಮಾನ ರಸ್ತೆಯಲ್ಲಿ ಬಂತು’ ಎಂದು ಮಂಗಳೂರು ನಾಗರಿಕರು ತಮಾಷೆ ಮಾಡುತ್ತಿದ್ದಾರೆ. ರೋಡ್ ಪಾಲಿಟಿಕ್ಸ್ ರಾಡಿಗೆ ಸ್ಮಾರ್ಟ್ ಸಿಟಿಯ ಜನರು ರೋಸಿ ಹೋಗಿದ್ದಾರೆ.

ಕಡಲನಗರಿ ಮಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಗರದ ಹೃದಯ ಭಾಗವಾದ ಅಂಬೇಡ್ಕರ್ ವೃತ್ತ( ಜ್ಯೋತಿ) ಬಳಿ ಫುಟ್ ಪಾತ್ ಕಟ್ಟುವ ಕೆಲಸ ಒಂದು ವರ್ಷದಿಂದ ನಡೆಯುತ್ತಿದೆ. ಫುಟ್ ಪಾತ್ ಎಂಬ ಹೆಸರಿನಲ್ಲಿ ಹೊಸತಾಗಿ ನಿರ್ಮಿಸುತ್ತಿರುವ ಕಾಂಕ್ರೀಟ್ ಬಾಕ್ಸ್ ಬದಿಯಲ್ಲಿ ಸಣ್ಣ ಕೊಳವೇ ನಿರ್ಮಾಣವಾಗಿದೆ. ಮಳೆ ನೀರು ನಿಂತು ಲಾರ್ವ ಸೃಷ್ಟಿಯಾಗಿದೆ. ಕೊರೊನಾ ಜತೆಗೆ ಮಲೇರಿಯಾ, ಡೆಂಗ್ಯು ಭೀತಿಯೂ ನಗರದಲ್ಲಿ ಜಾಸ್ತಿಯಾಗುತ್ತಿದೆ. ಪಿವಿಎಸ್, ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಮುಂತಾದ ಕಡೆಗಳಲ್ಲಿ ಸಾಲು ಸಾಲು ಇಂತಹ ಅವ್ಯವಸ್ಥೆಗಳಿವೆ.

ರಸ್ತೆ ಅತಿಕ್ರಮಣ, ಫುಟ್ ಪಾತ್ ಅತಿಕ್ರಮಣ, ಚರಂಡಿ ಅತಿಕ್ರಮಣದ ಬಗ್ಗೆ ಪಾಲಿಕೆ ಸೊಲ್ಲೆತ್ತುತ್ತಿಲ್ಲ, ಕೊರೊನಾ ನಿಯಂತ್ರಣದ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ನಮಗೆ ಬೇಕಾಗಿರುವುದು ರಸ್ತೆ ಮರು ನಾಮಕರಣವಲ್ಲ, ಕೊರೊನಾ ನಿಯಂತ್ರಣ ಎನ್ನುವುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

ರಸ್ತೆಗೆ ಪುನರ್ ನಾಮಕರಣ ಮಾಡಿ ನಾವು ಸಾಧಿಸುವುದಾದರೂ ಏನನ್ನು? ಸ್ಮಾರ್ಟ್ ಸಿಟಿ ಎಂದು ಹೆಸರಿಟ್ಟ ಮಂಗಳೂರನ್ನು ಮೊದಲು ಪರ್ಫೆಕ್ಟ್ ಸಿಟಿಯಾಗಿ ಮಾಡಿ, ನಂತರ ರಸ್ತೆಗೆ ಹೆಸರಿಡಿ. ಮಂಗಳೂರು ಮೇಯರ್ ಅವರು ಜನಸಾಮಾನ್ಯರಿಗೆ ತಟ್ಟುವಂತಹ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಬೇಕು
- ಲೋಕೇಶ್ ಜೆ., ಸಿವಿಲ್ ಎಂಜಿನಿಯರ್, ಮಂಗಳೂರು
ವಿಜಯ ಬ್ಯಾಂಕ್ ಸಂಸ್ಥಾಪಕರಾದ ಸುಂದರ ರಾಮ ಶೆಟ್ಟಿ ಅವರು ಮಹಾನ್ ಸಾಧಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಸ್ಥಾಪಿಸಿದ ಬ್ಯಾಂಕ್ ನ್ನು ಬೇರೊಂದು ಬ್ಯಾಂಕ್ ಜತೆ ವಿಲೀನ ಮಾಡಿದ ಪಕ್ಷಕ್ಕೆ ಸೇರಿದ ಮೇಯರ್ ಅವರು ಇದೀಗ ಶೆಟ್ಟರ ಹೆಸರನ್ನು ಇಟ್ಟು ಸಾಧಿಸಿದ್ದಾದರೂ ಏನನ್ನು? ಮೊದಲು ನಗರದೊಳಗಿನ ಕೊರೊನಾ ನಿಯಂತ್ರಿಸಲು ಕ್ರಮ ಕೈಗೊಳ್ಳಿ
- ಜಯಶ್ರೀ ಉರ್ವ, ಅಧ್ಯಾಪಕಿ, ಮಂಗಳೂರು