ಇತ್ತೀಚಿನ ಸುದ್ದಿ
ವಾಟ್ಸಾಪ್ ಗ್ರೂಪ್ ನಲ್ಲಿ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಬಜಪೆ ನಿವಾಸಿ ಆರೋಪಿಯ ಬಂಧನ
July 29, 2020, 8:11 AM

ಮಂಗಳೂರು(reporterkarnataka news):
ವಾಟ್ಸ್ ಆಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು ರೂಪೇಶ್ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಮೂಡಬಿದ್ರೆ ಠಾಣೆ ಪೊಲೀಸರು ಬಜ್ಪೆ ನಿವಾಸಿ ರಂಜಿತ್(25) ಎಂಬಾತನನ್ನು ಬಂಧಿಸಿದ್ದಾರೆ. ಮೂಡಬಿದ್ರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಗೋಸಾಗಾಟ ಮಾಡುವ ವ್ಯಾಪಾರಿಗಳಿಗೆ ಹಲ್ಲೆ ಮಾಡುವವರ, ದರೋಡೆ ಮಾಡುವ ಖದೀಮರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು ಬಿ. ರೂಪೇಶ್ ಅವರು ಮೊನ್ನೆ ಖಡಕ್ ವಾರ್ನಿಂಗ್ ನೀಡಿದ್ದರು. ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ವಾಟ್ಸ್ ಆಪ್ ಗ್ರೂಪಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಒಡ್ಡಿದ್ದರು. ಆರೋಪಿಗಳನ್ನು ತಕ್ಷಣವೇ ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆ ಸೂಕ್ತ ಸಂದೇಶ ರವಾನಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿತ್ತು.
“ರಾಮ್ ಸೇನಾ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ತುಳು ಭಾಷೆಯಲ್ಲಿ “ಫಸ್ಟ್ ಮೊಲೆನ್ ಕಡ್ತ್ ಕೆರೊಡು” (ಮೊದಲು ಇವಳನ್ನು ಕಡಿದು ಕೊಲೆಗೈಯಬೇಕು) ಎಂದು ಪೋಸ್ಟ್ ಗೆ ಕಾಮೆಂಟ್ ಬರೆಯುವ ಮೂಲಕ ಕೊಲೆ ಬೆದರಿಕೆ ಒಡ್ಡಲಾಗಿದೆ. ಇದೇ ಗ್ರೂಪಿನ ಇನ್ನಿತರ ಸದಸ್ಯರು ಕೂಡ ಇದೇ ತರ ಬೆದರಿಕೆ ಹಾಕಿದ್ದಲ್ಲದೆ ಇದೆಲ್ಲವನ್ನು ಅಡ್ಮಿನ್ ನೋಡಿಯೂ ಸುಮ್ಮನಿದ್ದ ಎಂಬ ಆರೋಪ ಕೇಳಿಬಂದಿತ್ತು.
ಕಾಮೆಂಟ್ ಬರೆದಿರುವ ಮೊಬೈಲ್ ಸಂಖ್ಯೆಯನ್ನು
ಪತ್ತೆ ಹಚ್ಚಿ ಪೋಲಿಸರು ಜಿಲ್ಲಾಧಿಕಾರಿಗೆ ರಕ್ಷಣೆ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದರು. ಮೂಡಬಿದ್ರೆ ಪೊಲೀಸರು ರಂಜಿತ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ನಿನ್ನೆ ಜಿಲ್ಲಾಧಿಕಾರಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ.