ಇತ್ತೀಚಿನ ಸುದ್ದಿ
ಮಂದಾರದಿಂದ ಪಂಜರದ ಬದುಕು: ಪಚ್ಚನಾಡಿ ತ್ಯಾಜ್ಯ ದುರಂತಕ್ಕೆ ಒಂದು ವರ್ಷ !
August 4, 2020, 6:54 PM

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದ ಮಂದಾರದಲ್ಲಿ ಸಂಭವಿಸಿದ ಮಾನವ ನಿರ್ಮಿತ ಭೀಕರ ತ್ಯಾಜ್ಯ ದುರಂತಕ್ಕೆ ಒಂದು ವರ್ಷ ತುಂಬಿದೆ. ಮನೆ ಮಠ ಕಳೆದುಕೊಂಡ 25 ಕುಟುಂಬಗಳು ಅನಾಥವಾಗಿ ಕರ್ನಾಟಕ ಗೃಹ ಮಂಡಳಿಯ ಗೂಡು ಸೇರಿವೆ. ಅಂದು ಆಡಳಿತದಲ್ಲಿದ್ದವರು ಇಂದು ಪ್ರತಿಪಕ್ಷದ ಸ್ಥಾನದಲ್ಲಿದ್ದಾರೆ. ಪ್ರತಿಪಕ್ಷದಲ್ಲಿದ್ದವರು ಅಧಿಕಾರದ ಗದ್ದುಗೆ ಏರಿದ್ದಾರೆ. ಇಷ್ಟು ಬದಲಾವಣೆ ಬಿಟ್ಟರೆ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಒಂದು ವರ್ಷದಲ್ಲಿ ಮಂದಾರದಿಂದ ಪಂಜರದ ಬದುಕು: ಪಚ್ಚನಾಡಿ ತ್ಯಾಜ್ಯ ದುರಂತಕ್ಕೆ ಒಂದು ವರ್ಷ !

2019 ಆಗಸ್ಟ್ 6ರಂದು ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ತಡೆಗೋಡೆ ಕುಸಿದಿತ್ತು. ಕೆಂಪು ಕಲ್ಲಿನಿಂದ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಮಹಾ ದುರಂತ ಸಂಭವಿಸಿತ್ತು. ನೋಡು ನೋಡುತ್ತಿದ್ದಂತೆ ತ್ಯಾಜ್ಯ ಸುನಾಮಿ 2 ಕಿಮೀ. ದೂರದ ಮಂದಾರವನ್ನು ನುಂಗಿ ಹಾಕಿತು. ಸುಮಾರು 10 ಲಕ್ಷ ಟನ್ ತ್ಯಾಜ್ಯ ಮಂದಾರದ ಸುಮಾರು 15 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಆಹುತಿ ಪಡೆಯಿತು. ಸುಮಾರು 25 ಕುಟುಂಬಗಳು ಅಕ್ಷರಶಃ ಬೀದಿ ಪಾಲಾದವು. ಸಾಕು ಪ್ರಾಣಿಗಳು ತಬ್ಬಲಿಯಾದವು. ಕೆರೆ, ಕೊಳ, ಬಾವಿ ಕಲುಷಿತಗೊಂಡಿತು. ನಳನಳಿಸುತ್ತಿದ್ದ ಭೂಮಿ ಸ್ಮಶಾನವಾಯಿತು.

ಆರಂಭದಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ದಂಡೇ ಮಂದಾರಕ್ಕೆ ಆಗಮಿಸಿತು. ಎಲ್ಲರೂ ಫೋಟೋ ತೆಗಿಸಿಕೊಂಡು ಹಲವು ಭರವಸೆಗಳನ್ನು ನೀಡಿದರು. ತಿಂಗಳು ಕಳೆಯುತ್ತಿದ್ದಂತೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಓಡಾಟ ನಿಂತು ಹೋಯಿತು.

ತ್ಯಾಜ್ಯ ದುರಂತ ನಡೆದಾಗ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆಗಿದ್ದ ಮಹಮ್ಮದ್ ನಜೀರ್ ಹಾಗೂ ಉಪ ಆಯುಕ್ತೆ(ಕಂದಾಯ) ಗಾಯತ್ರಿ ನಾಯಕ್ ನಂತರ ವರ್ಗಾವಣೆಗೊಂಡರು. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಸ್ವಯಂ ನಿವೃತ್ತಿ ಹೊಂದಿದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ಸಿಂಧೂ ಬಿ. ರೂಪೇಶ್ ಒಂದೆರಡು ಬಾರಿ ಮಂದಾರಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿ ಹೋದರು. ಪಾಲಿಕೆಯ ಹೊಸ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಕೂಡ ನಾಲ್ಕೈದು ಬಾರಿ ಮಂದಾರಕ್ಕೆ ಭೇಟಿ ನೀಡಿ ಭರವಸೆಯ ಮಾತನಾಡಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದರು.

ಮಂತ್ರಿ- ಮಾಗಧರ ಹಾಗೂ ಅಧಿಕಾರಿಗಳ ದಂಡೇ ಬಂದು ಹೋದರೂ ಸಂತ್ರಸ್ತರ ಕಣ್ಣೀರು ಮಾತ್ರ ನಿಂತಿಲ್ಲ. ಮಂದಾರದಲ್ಲಿ ಸ್ವಚ್ಛಂದ ಬದುಕು ಕಟ್ಟಿಕೊಂಡ ಸಂತ್ರಸ್ತರು ಕುಡುಪು ಸಮೀಪದ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮನೆಗಳಲ್ಲಿ ಪಂಜರದ ಬದುಕು ನಡೆಸುತ್ತಿದ್ದಾರೆ. ಕೆಲವು ಹಿರಿಯ ನಾಗರಿಕರಲ್ಲಿ ಮಾನಸಿಕ ಸಮಸ್ಯೆಗಳು ಕಂಡು ಬಂದಿವೆ. ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದಾರೆ.

ಸಂತ್ರಸ್ತರಲ್ಲಿ ಕೆಲವರಿಗೆ ಕೃಷಿ ಪರಿಹಾರನ್ನು ಸರಕಾರ ಕೊಟ್ಟದ್ದು ಬಿಟ್ಟರೆ ಬೇರೆ ಯಾವುದೇ ಪರಿಹಾರ ದೊರಕಿಲ್ಲ. ತಾವು ಮಾಡದ ತಪ್ಪಿಗೆ ಇಲ್ಲಿನ ನಿವಾಸಿಗಳು ದಸರಾ, ದೀಪಾವಳಿ, ಹೊಸ ವರ್ಷ, ಯುಗಾದಿಯನ್ನು ಕರ್ನಾಟಕ ಗೃಹ ಮಂಡಳಿಯ ಫ್ಲ್ಯಾಟ್ ಗಳ ನಾಲ್ಕು ಗೋಡೆಗಳ ಮಧ್ಯೆ ಆಚರಿಸುವಂತಾಯಿತು. ದುರಂತ ನಡೆದಾಗ ಅಧಿಕಾರದಲ್ಲಿದ್ದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ , ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ , ಉಪ ಆಯುಕ್ತೆ ಗಾಯತ್ರಿ ನಾಯಕ್ ಅವರು 3 ತಿಂಗಳೊಳಗಾಗಿ ಸೂಕ್ತ ಮತ್ತು ಗರಿಷ್ಠ ಪರಿಹಾರ ನೀಡಿ ಪ್ರಕರಣದ ಇತ್ಯರ್ಥದ ಭರವಸೆ ನೀಡಿದ್ದರು. ಆದರೆ ನಂತರ ಬಂದ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಹಿಂದಿನ ಅಧಿಕಾರಿಗಳ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಂದಾರ ಸಂತ್ರಸ್ತರಿಗೆ ಈಗಿರುವ ವಸತಿ ಸಂಕೀರ್ಣದಲ್ಲೇ ಉಚಿತ ಖಾಯಂ ಮರುವಸತಿ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಅಂದು ನೀಡಿದ್ದರೂ ಅದು ಇಂದಿನವರೆಗೂ ಈಡೇರಿಲ್ಲ. ನಂತರದಲ್ಲಿ ಬಂದ ಅಧಿಕಾರಿಗಳನ್ನು ಮಂದಾರ ಸಂತ್ರಸ್ತರು ಅನೇಕ ಬಾರಿ ಸಂಪರ್ಕಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

ಕೆಲವು ಸಂತ್ರಸ್ತರಿಗೆ ಮಾತ್ರ ಕೃಷಿ ಪರಿಹಾರ ದೊರೆತಿದೆ. ಇನ್ನು ಕೆಲವು ಕೃಷಿ ಕುಟುಂಬಗಳ ದಾಖಲೆ ಪತ್ರ ಸರಿ ಇಲ್ಲ ಎಂಬ ಕಾರಣ ನೀಡಿ ಪರಿಹಾರ ಮುಂದೂಡಲಾಗಿದೆ. ಇನ್ನು ನಷ್ಟವಾದ ಕೃಷಿ ಭೂಮಿ , ಕೆರೆ ಬಾವಿಗಳು, ಮನೆ ಪರಿಹಾರಗಳು ಎಷ್ಟು ಎಂಬುದು ನಿಗದಿಯಾಗಿಲ್ಲ. ಹಾಗೆಯೇ ಭೂ ಪರಿವರ್ತಿತ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ, ನಷ್ಟವಾಗಿರುವ ಕುಟುಂಬಗಳ ನಷ್ಟದ ಪ್ರಮಾಣ ಮತ್ತು ಪರಿಹಾರದ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವು ಭೂ ಪರಿವರ್ತಿತ ಭೂಮಿಗಳು ನಾಶವಾಗಿದ್ದು ಅದರ ನಷ್ಟದ ಪ್ರಮಾಣ ಮತ್ತು ಪರಿಹಾರ ಸಂತ್ರಸ್ತರಿಗೆ ಸಿಗಬೇಕಿದೆ. ನಾಶವಾದ ದೈವಸ್ಥಾನ, ನಾಗಬನ ಧಾರ್ಮಿಕ ನಂಬಿಕೆಗಳ ಪುನಶ್ಚೇತನದ ಬಗ್ಗೆ ನಿರ್ಧಾರ ಆಗಬೇಕಿದೆ. ಹಾನಿಗೀಡಾದ ಮಂದಾರ ರಾಮಾಯಣ ಖ್ಯಾತಿಯ ಮಂದಾರ ಕೇಶವ ಭಟ್ ಅವರ ಪಾರಂಪರಿಕ ಮನೆ ಮರು ನಿರ್ಮಾಣದ ನಿರ್ಧಾರ ಇನ್ನು ಆಗಬೇಕಿದೆ. ಮಂದಾರದಲ್ಲಿ ಉಳಿಯುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅವಶ್ಯಕತೆ ಇದೆ. ಪ್ರದೇಶವನ್ನು ನಾಶ ಮಾಡಿದ ಸುಮಾರು 10 ಲಕ್ಷ ಟನ್ ಘನ ತ್ಯಾಜ್ಯಗಳ ವಿಲೇವಾರಿ ಆಗಬೇಕಿದೆ. ಇದ್ಯಾವುದೂ ಕಳೆದ ಒಂದು ವರ್ಷದಲ್ಲಿ ನಡೆದಿಲ್ಲ. ಇದಕ್ಕೆಲ್ಲ ಉತ್ತರ ಸಿಗಲು ಇನ್ನೆಷ್ಟು ವರ್ಷ ಕಾಯಬೇಕೆನ್ನುವುದೇ ಸದ್ಯದ ಪ್ರಶ್ನೆಯಾಗಿದೆ.