ಇತ್ತೀಚಿನ ಸುದ್ದಿ
ಕೊರೊನಾ ಭೀತಿ : ಸ್ವಾತಂತ್ರ್ಯ ದಿನಾಚರಣೆಗೂ ಮಾರ್ಗಸೂಚಿ
July 24, 2020, 1:36 PM

ನವದೆಹಲಿ(reporterkarnataka news):
ಸ್ವತಂತ್ರ ಭಾರತದಲ್ಲಿ ಇಷ್ಟು ವರ್ಷಗಳಲ್ಲಿ ಈ ತರಹದ ಸ್ಥಿತಿ ಬಂದಿರಲು ಸಾಧ್ಯವೇ ಇಲ್ಲ. ಎಲ್ಲರ ಊಹೆಗೂ ಮೀರಿ ಕೊರೊನಾ ನೆಲೆಯಾಗಿಬಿಟ್ಟಿದೆ. ಇದೇ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆಗೆಗೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೇಗೆ ಆಚರಣೆ ಮಾಡಬೇಕು? ಯಾವೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಗೃಹ ಸಚಿವಾಲಯ ಪತ್ರವನ್ನು ಬರೆದಿದ್ದು ಮಾರ್ಗಸೂಚಿಯನ್ನು ತಿಳಿಸಿದೆ. ಕೇಂದ್ರ ನೀಡಿರುವ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರ ವಹಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜನ ಸೇರುವುದನ್ನು ತಡೆಯಬೇಕು, ತಂತ್ರಜ್ಞಾನ ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು. ಕಾರ್ಯಕ್ರಮ ನೇರ ಪ್ರಸಾರ ಮಾಡಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದೆ.
ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಗೌರವ ಪಡೆದುಕೊಳ್ಳಲಿದ್ದಾರೆ. ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ತಿರಂಗಾದ ಬಲೂನ್ ಗಳನ್ನು ಹಾರಿ ಬಿಡಲಾಗುವುದು.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ ಬಳಿಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಬೇಕು. ರಾಷ್ಟ್ರಗೀತೆ ಹಾಡುವುದು, ಧ್ವಜಾರೋಹಣ, ಪೊಲೀಸರು/ಸಶಸ್ತ್ರ ಪಡೆಗಳಿಂದ ಗೌರವವಂದನೆ ಸ್ವೀಕಾರ ಮುಖ್ಯಮಂತ್ರಿಗಳ ಭಾಷಣ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಗಿಯಬೇಕು ಎಂದು ತಿಳಿಸಲಾಗಿದೆ. ಕೊರೊನಾ ವಾರಿಯರ್ಸ್ ಆದ ಡಾಕ್ಟರ್, ನರ್ಸ್, ಪೌರ ಕಾರ್ಮಿಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕು. ಅವರು ಕಾರ್ಯಗಳನ್ನು ಶ್ಲಾಘಿಸಬೇಕು ಎಂದು ತಿಳಿಸಿಲಾಗಿದೆ. ಕೊರೋನಾದಿಂದ ಗುಣಮುಖರಾದವರನ್ನು ಕರೆಸಬೇಕು ಎಂದು ತಿಳಿಸಲಾಗಿದೆ.
ಇದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ತಾಲೂಕಾ ಮಟ್ಟದದಲ್ಲಿ ತಹಶೀಲ್ದಾರ್, ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೊರೋನಾ ವಾರಿಯರ್ಸ್ ಗೆ ನಮನ ಸಲ್ಲಿಸುವುದು, ಆತ್ಮನಿರ್ಭರ ಭಾರತದ ಬಗ್ಗೆ ಜಾಗೃತಿ ಮೂಡಿಸುವುದನ್ನು ಕಾರ್ಯಕ್ರಮ ಒಳಗೊಳ್ಳುತ್ತದೆ.